ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ಜುಲೈ 4, 2014

ಡಬ್ಬಿಂಗ್‌ ಬೇಡ ಎನ್ನುವವರಿಗೆ ಒಂದಿಷ್ಟು ನನ್ನ ಪ್ರಶ್ನೆಗಳು

ಅರುಣಕುಮಾರ ಧುತ್ತರಗಿ 

















ಕನ್ನಡಕ್ಕೆ ಡಬ್ಬಿಂಗ ಬೇಡವೇ ಬೇಡ ಎಂದು ಪರ ಮತ್ತು ಸಿನೆಮಾ ರಂಗದವರ ಅಭಿಪ್ರಾಯವಾಗಿದೆ. ಈ ಕುರಿತು  ಮಾಧ್ಯಮಗಳಲ್ಲಿ ಸಾಕಷ್ಟು ಪರ ವಿರೋಧ ಅಭಿಪ್ರಾಯಗಳನ್ನು ಹಲವರು ವ್ಯಕ್ತಪಡಿಸಿದ್ದಾರೆ. ಸಿನೆಮಾ ರಂಗದವರಂತು ಹೊರಾಟವನ್ನೇ ಮಾಡಿದ್ದಾರೆ. ಇವರ ಉದ್ದೇಶ ಇಷ್ಟೆ ಕನ್ನಡ ಉಳಿಯಬೇಕು ಮತ್ತು ಬೆಳೆಯಬೇಕು ಎಂದು ಸಿನೆಮಾರಂಗದವರು ಹೇಳುತ್ತಾರೆ. 
 
ಆದರೆ ಸಿನೆಮಾ ಕನ್ನಡದ ಸಿನೆಮಾ ರಂಗದವರು ನಿಜಕ್ಕು ಕನ್ನಡಕ್ಕಾಗಿ ಹೋರಾಡುತ್ತಿದ್ದಾರೋ ಅಥವಾ ತಮ್ಮ ಅಳಿವು ಉಳಿವಿಗಾಗಿ ಎಂಬ ಪ್ರಶ್ನೆ ಕೂಡ ಉಧ್ಬವಿಸುತ್ತದೆ. ಇವರೆಲ್ಲರು ಕನ್ನಡವನ್ನು ಪ್ರೀತಿಸುತ್ತಾರೆ, ಇದು ನಿಜಕ್ಕು ಸಂತಸದ ವಿಷಯ. ಆದರೆ ಇವರ ಕನ್ನಡ ಕೇವಲ ಸಿನೆಮಾಗೆ ಮಾತ್ರ ಸಿಮಿತವೇ ಎಂಬ ಪ್ರಶ್ನೆ ಕೂಡ ಉಧ್ಬವಿಸುವುದು ಸಹಜ. ಇವರೇನು ಕನ್ನಡದ ಪರವಾಗಿ ಡಬ್ಬಿಂಗ ವಿರೋಧಿಸುತ್ತಿದ್ದಾರೊ ಅಥವಾ ತಮ್ಮ ಹೊಟ್ಟೆ ಪಾಡಿಗಾಗಿ ಹೋರಾಡುತ್ತಿದ್ದಾರೊ ಎಂಬ ಪ್ರಶ್ನೇಗಳು ಉಧ್ಬವಿಸುತ್ತದೆ. 
 
 
ಕನ್ನಡ ಭಾಷೆ ಉಳಿಯಬೇಕು. ಬೆಳೆಯಬೇಕು ನಿಜ . ಆದರೆ  ಕನ್ನಡ ಚಿತ್ರರಂಗದವರ ಕನ್ನಡ ಪ್ರೇಮದ ಬಗ್ಗೆ ಕೂಡ ಸಂಶಯ ವ್ಯಕ್ತವಾಗುತ್ತದೆ. ಇವರು ಸಿನೆಮಾ ರಂಗದ ಕನ್ನಡ ಪರವಾಗಿ ಮಾತ್ರ ಇದ್ದಾರೆನೋ ಎಂದು ಅನಿಸುವುದು ಸಹಜ. ಇಲ್ಲಿಯವರೇಗೆ ಎಷ್ಟೊಂದು ಕನ್ನಡ ಪರ ಹೋರಾಟ ನಡೆದಿವೆ, ಆಗ ಡಾ,ರಾಜಕುಮಾರ ಇರುವವರೆಗೆ ಮಾತ್ರ ಕೆಲವೊಂದು ಕನ್ನಡ ಪರ ಚಳುವಳಿಗಳು ನಡೆದಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕಾಗಿ ಚಿಂತ್ರರಂಗದವರ ಕೊಡುಗೆಯಾದರು ಏನು ? ಕೇವಲ ಡಬ್ಬಿಂಗ ಮಾತ್ರ ಬೇಡ ಎನ್ನುವುದು ಮಾತ್ರ ಕನ್ನಡ ಪ್ರೇಮವೋ ಅಥವಾ ಕನ್ನಡದ ಯಾವುದೇ ವಿಷಯಕ್ಕಾಗಿ ಇವರ ಹೋರಾಟವೋ ಎಂದು ಗೊತ್ತಾಗುತ್ತಿಲ್ಲ. 
 
ಕನ್ನಡ ಮತ್ತು ಕನ್ನಡಿಗಗರಿಗಾಗಿ ಏನಾದರು ಧಕ್ಕೆ ಬಂದರೆ ಕೇವಲ ಕನ್ನಡ ಪರ ಸಂಘಟನೆಗಳು ಮಾತ್ರ ಹೋರಾಟಕ್ಕೆ ಇಳಿಯುತ್ತಾರೆ. ಮತ್ತು ಈ ಹೋರಾಟದಲ್ಲಿ ಈ ಸಂಘಟನೆಯ ಕಾರ್ಯಕರ್ತರು ಪೋಲಿಸರಿಂದ ಲಾಟಿ ಏಟು ಕೂಡ ತಿಂದು ಕನ್ನಡದ ಪರ ನಿಲ್ಲುತ್ತಾರೆ. ಈ ಸಮಯದಲ್ಲಿ ಕನ್ನಡ ಪ್ರೇಮಿಗಳು ಎಂದು ಹೇಳಿಕೊಳ್ಳುವ ಸಿನೆಮಾರಂಗದವರು ತುಟಿ ಕೂಡ ಬಿಚ್ಚುವುದಿಲ್ಲ. ಈ ಸಮಯದಲ್ಲಿ ಏಕೆ ಇವರಿಗೆ ಬರುವುದಿಲ್ಲ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. 
 
ಶಾಲೆಗಳಲ್ಲಿ ಕನ್ನಡ ಒತ್ತಾಯ ಪೂರ್ವಕವಾಗಿ ಕಲಿಸುವ ಹಾಗಿಲ್ಲ, ಮಾತೃಭಾಷೆ ಎನ್ನುವುದು ಕನ್ನಡವೇ ಇರಬೇಕಿಲ್ಲ. ತಮ್ಮ ತಂದೆ ತಾಯಿರ ಭಾಷೆ ಮಾತ್ರ ಮಾತೃಭಾಷೆ,  ಎಂದು ಸೂಪ್ರೀಂ ಕೋರ್ಟ್ ಮೊನ್ನೆ ತಾನೆ ಹೇಳಿತು. ಆದರೆ ಈ ಸಮಯದಲ್ಲಿ ಕನ್ನಡ ಪ್ರೇಮಿಗಳು ಎಂದು ಹೇಳಿಕೊಳ್ಳುವ ಸ್ಯಾಂಡಲ್‌ವುಡನವರು ಒಂದೇ ಒಂದು ಹೇಳಿಕೆ ನೀಡಿದ ಉದಾಹರಣೆ ಕಂಡು ಬರುತ್ತಿಲ್ಲ. 
 
ಇವರು ನಿಜಕ್ಕು ಕನ್ನಡ ಪ್ರೇಮಿಗಳು ಎಂದಾದರೆ , ಮಾತೃಭಾಷೆ ಕನ್ನಡವೇ ಆಗಬೇಕು ಎಂದು ಹೋರಾಟ ಮಾಡಬೇಕಿತ್ತು , ಕನಿಷ್ಠ ಒಂದು ಹೇಳಿಕೆಯಾದರು ನೀಡಬೇಕಿತ್ತು, ಯಾಕೆ ನೀಡಿಲ್ಲ ಎಂಬ ವಿಚಾರವು ಇವರ ಕನ್ನಡ ಪ್ರೇಮವನ್ನು ಪ್ರಶ್ನಿಸುವಂತಿದೆ.
 
ರಾಜ್ಯದಲ್ಲಿ ಬರಗಾಲದಿಂದ ರೈತರು ತತ್ತರಿಸುತ್ತಿದ್ದಾರೆ. ಇವರಿಗೆ ನಿಜಕ್ಕೂ ಕನ್ನಡಿಗರ ಬಗ್ಗೆ ಕಾಳಜೀ ಇದ್ದಿದ್ದರೆ, ಯಾಕೆ ಇಲ್ಲಿಯವರೇಗು ಒಂದೆ ಒಂದು ಹೇಳಿಕೆ ನೀಡಿಲ್ಲ. ಈಗ ಕನ್ನಡಿಗರಿಗೆ ಕುಡಿಯಲು ನೀರು ಇಲ್ಲ , ವಿಧ್ಯುತ್‌‌ ಇಲ್ಲ . ರೈತರು ತುಂಬಾನೆ ಕಷ್ಟದಲ್ಲಿದ್ದಾರೆ. ಈ ರೈತರ ಕೂಗು ಇವರ ಕಿವಿಗೆ ಕೇಳಿಸುತ್ತಿಲ್ಲ ಏಕೆ? ಇವರ ಕನ್ನಡ ಪ್ರೇಮ ಕೇವಲ ಸಿನೆಮಾಗಾಗಿ ಮಾತ್ರ ಎಂದು ಅನಿಸುವುದು ಸಹಜ. 
 
ಕನ್ನಡವನ್ನು ಅಷ್ಟೋಂದು ಪ್ರೀತಿಸುತ್ತೇವೆ ಎಂದು ಹೇಳುವ ಸ್ಯಾಂಡ್‌‌‌ಲವವುಡ್‌‌‌ನವರು ಬೇರೆ ಭಾಷೆಯ ಸಿನೆಮಾದಲ್ಲಿ ನಟಿಸುವುದಾದರು ಏಕೆ? ಡಬ್ಬಿಂಗ ಮಾತ್ರ ಬೇಡ ಎಂದರೆ ಸಾಕೇ ? ಇವರು ಕೂಡ ಕನ್ನಡ ಬಿಟ್ಟು ಬೇರೆ ಸಿನೆಮಾದಲ್ಲಿ ನಟಿಸಬಾರದು. ಹೌದಲ್ಲವೆ?.  ಇತರ ಬಾಷೆಗಳಲ್ಲಿ ನಟಿಸಿ ಕೋಟಿಗಟ್ಟಲೆ ದುಡ್ಡನ್ನು ಪಡೆದು ಬೇರೆ ಭಾಷೆಗೆ ಬೆಂಬಲಿಸಿದ ಮೇಲೂ ಕೂಡ ಡಬ್ಬಿಂಗ ಬೇಡ ಎಂದು ಹೇಳುವ ಇವರಿಗೆ ನೈತಿಕ ಹಕ್ಕಿದೆಯೇ ? 
 
ಕನ್ನಡ ಸಿನೆಮಾದಲ್ಲಿ , ಹೊರ ರಾಜ್ಯದ ನಟಿಯರನ್ನು ಕರೆದುಕೊಂಡು ಬಂದು ನಟನೆ ಮಾಡಿಸುತ್ತಾರೆ. ಯಾಕೆ ಇವರಿಗೆ ಕರ್ನಾಟಕಲ್ಲಿ ಒಬ್ಬ ನಟಿ ಸಿಗೊದಿಲ್ಲವೆ? ಕನ್ನಡದಲ್ಲಿ ನಟನೆ ಮಾಡುವ ಯಾವ ಸುಂದರಿಯರು ಇಲ್ಲವೇ ? ತಮ್ಮ ಸಿನೆಮಾ ಓಡಬೇಕೆಂದು ಹೊರ ರಾಜ್ಯದ ನಟಿಯರನ್ನು ಕರೆತರುವುದು , ಆಮೇಲೆ ಡಬ್ಬಿಂಗ ವಿಷಯದಲ್ಲಿ ಮಾತ್ರ ನಾವು ಕನ್ನಡಿಗರೆಂದು ಹೇಳಿಕೊಳ್ಳುವುದು ಎಷ್ಟು ಸರಿ? 
 
ಬೇರೆ ಭಾಷೆಯ ಸಿನೆಮಾವನ್ನು ರಿಮೇಕ ಮಾಡುತ್ತಾರೆ, ಆಮೇಲೆ ಡಬ್ಬಿಂಗ ಬೇಡ ಎಂದು ಹೇಳುವುದು  ಎಷ್ಟು ಸರಿ? . ಯಾಕೆ ಕನ್ನಡದಲ್ಲಿ ಕಥೆಗಳಿಲ್ಲವೇ ? ಕನ್ನಡ ಸಾಹಿತ್ಯಕ್ಕೆ ಅಷ್ಟೊಂದು ಬರ ಬಂದಿದೆಯೇ? 
ಇನ್ಯಾರದೋ ಭಾಷೆಯ ಕಥೆ ತಂದು ಸಿನೆಮಾ ಮಾಡುವಾಗ ಇವರಿಗೆ ಕನ್ನಡದ ಬಗ್ಗೆ ಇರುವ ಪ್ರೇಮ ಎಲ್ಲಿ ಹೋಗುತ್ತದೆ?  ಕನ್ನಡ ಸಾಹಿತ್ಯಕ್ಕೆ ತನ್ನದೇ ಅದ ಹೆಸರು ಇದೆ. ಈ ಕನ್ನಡ ನಾಡಿನನಲ್ಲಿ ಒಂದು ಕಥೆ ಸಿಗೋದಿಲ್ಲ ಎಂದರೆ ಎಷ್ಟೋಂದು ದುರದುಷ್ಟಕರ ? ಇದೆಲ್ಲದರ ಮಧ್ಯೆ ಡಬ್ಬಿಂಗ ಮಾತ್ರ ಬೇಡ , ನಾವು ಕನ್ನಡಿಗರು , ಕನ್ನಡ ಉಳಿಯಬೇಕು ಎಂದು ಹೇಳುವುದೆಷ್ಟು ಸರಿ ? 
 
ಇದೆಲ್ಲವನ್ನು ನೋಡಿದಾಗ ಸ್ಯಾಂಡಲ್‌‌ವುಡ್‌‌ನವರು ಕೇವಲ ತಮ್ಮ ಹೊಟ್ಟೆ ಪಾಡಿಗಾಗಿ ಮಾತ್ರ ಡಬ್ಬಿಂಗ ಬೇಡ ಎನ್ನುತ್ತಿದ್ದಾರೆ ವಿನಃ ಕನ್ನಡದ ಮೇಲಿನ ಪ್ರೇಮಕ್ಕಾಗಿ ಅಲ್ಲ ಎಂಬ ಸಂಶಯ ಹುಟ್ಟುವುದು ಸಹಜ. 
 
ಇಷ್ಟಕ್ಕು ನಾನು ಇಲ್ಲಿ ಡಬ್ಬಿಂಗ ಪ್ರವಾಗಿ ಇಲ್ಲ. ಆದರೆ ಈ ನನ್ನ ಮನಸ್ಸಿನಲ್ಲಿ ಹುಟ್ಟುವುದೇನೆಂದರೆ ಈ ಕನ್ನಡ ಸಿನೆಮಾದವರ ಕನ್ನಡ ಪ್ರೇಮ ಎಷ್ಟರ ಮಟ್ಟಿಗೆ ಇದೆ ಎಂದು ಪ್ರಶ್ನೆ ಹುಟ್ಟುವುದು ಸಹಜ. 

-ಅರುಣಕುಮಾರ ಧುತ್ತರಗಿ